ಪ್ರೇಮ ಮಂದಿರ (ಟೆಂಪಲ್ ಆಫ್ ಲವ್) ಭಾರತದ ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ವೃಂದಾವನದಲ್ಲಿರುವ ಹಿಂದೂ ದೇವಾಲಯವಾಗಿದೆ . ಇದು ಮಥುರಾ ನಗರಕ್ಕೆ ಹತ್ತಿರವಾಗಿದೆ. ಈ ಮಂದಿರವು ಅಂತರಾಷ್ಟ್ರೀಯ ಲಾಭರಹಿತ, ಶೈಕ್ಷಣಿಕ, ಆಧ್ಯಾತ್ಮಿಕ, ಚಾರಿಟಬಲ್ ಟ್ರಸ್ಟ್‌ ಆದಂತಹ ಜಗದ್ಗುರು ಕೃಪಾಲು ಪರಿಷತ್‌ನಿಂದ ನಿರ್ವಹಿಸಲ್ಪಡುತ್ತದೆ. ಈ ಸಂಕೀರ್ಣವು ವೃಂದಾವನದ ಹೊರವಲಯದ ೫೫ ಎಕರೆ ಪ್ರದೇಶದಲ್ಲಿದೆ. ಈ ಮಂದಿರವು ರಾಧಾ ಕೃಷ್ಣ ಮತ್ತು ಸೀತಾ ರಾಮರಿಗೆ ಸಮರ್ಪಿಸಲಾಗಿದೆ. ಇಲ್ಲಿ ರಾಧಾ ಕೃಷ್ಣ ಮೊದಲ ಹಂತದಲ್ಲಿ ಮತ್ತು ಸೀತಾ ರಾಮ ಎರಡನೇ ಹಂತದಲ್ಲಿದ್ದಾರೆ. ಈ ದೇವಾಲಯವನ್ನು ಐದನೇ ಮೂಲ ಜಗದ್ಗುರು ಶ್ರೀ ಕೃಪಾಲು ಜಿ ಮಹಾರಾಜರು ಸ್ಥಾಪಿಸಿದರು. ಶ್ರೀ ಕೃಷ್ಣ ಮತ್ತು ರಾಸಿಕ್ ಸಂತರ ವಿವಿಧ ಲೀಲೆಗಳನ್ನು ಮುಖ್ಯ ದೇವಾಲಯದ ಗೋಡೆಯ ಮೇಲೆ ಚಿತ್ರಿಸಲಾಗಿದೆ. ಈ ಮಂದಿರದ ನಿರ್ಮಾಣವು ಜನವರಿ ೨೦೦೧ ರಲ್ಲಿ ಪ್ರಾರಂಭವಾಯಿತು ಹಾಗೂ ಉದ್ಘಾಟನಾ ಸಮಾರಂಭವು ೧೫ ರಿಂದ ೧೭ ಫೆಬ್ರವರಿ ೨೦೧೨ ರವರೆಗೆ ನಡೆಯಿತು. ಫೆಬ್ರವರಿ ೧೭ ರಂದು ದೇವಾಲಯವನ್ನು ಸಾರ್ವಜನಿಕರಿಗೆ ತೆರೆಯಲಾಯಿತು. ಇದರ ವೆಚ್ಚ ೧೫೦ ಕೋಟಿ ರೂಪಾಯಿಗಳು ($೨೩ ಮಿಲಿಯನ್). ಶ್ರೀ ರಾಧಾ ಗೋವಿಂದ್ (ರಾಧಾ ಕೃಷ್ಣ) ಮತ್ತು ಶ್ರೀ ಸೀತಾ ರಾಮ್ ಈ ದೇಗುಲದ ಪ್ರಧಾನ ದೇವತೆಗಳಾಗಿದ್ದಾರೆ. ಈ ಮಂದಿರದ ಪಕ್ಕದಲ್ಲಿ ೭೩,೦೦೦ ಚದರ ಅಡಿ, ಪಿಲ್ಲರ್‌ಗಳಿಲ್ಲದ ಗುಮ್ಮಟದ ಆಕಾರದ ಸತ್ಸಂಗ ಸಭಾಂಗಣವನ್ನು ನಿರ್ಮಿಸಲಾಗುತ್ತಿದ್ದು, ಇದು ಏಕಕಾಲದಲ್ಲಿ ೨೫,೦೦೦ ಜನರಿಗೆ ಕೂಡಲು ಅವಕಾಶ ಕಲ್ಪಿಸುತ್ತದೆ. ಉದ್ಯಾನವನಗಳು ಮತ್ತು ಕಾರಂಜಿಗಳಿಂದ ಆವೃತವಾಗಿರುವ ದೇವಾಲಯದ ಸಂಕೀರ್ಣವು ಶ್ರೀ ಕೃಷ್ಣನ ಜೀವನದ ನಾಲ್ಕು ಲೀಲೆಗಳ ಚಿತ್ರಣವನ್ನು ಹೊಂದಿದೆ. ಅವುಗಳು- ಜೂಲನ್ ಲೀಲಾ, ಗೋವರ್ಧನ ಲೀಲಾ, ರಾಸ್ ಲೀಲಾ ಮತ್ತು ಕಾಲಿಯಾ ನಾಗ್ ಲೀಲಾ. ಇದು ೨೦೦೫ ರಲ್ಲಿ ತೆರೆಯಲಾದ ಭಕ್ತಿ ಮಂದಿರದ ಸಹೋದರಿ ದೇವಾಲಯವಾಗಿದೆ ಮತ್ತು ೨೦೧೯ರಲ್ಲಿ ಬರ್ಸಾನಾದಲ್ಲಿ ತೆರೆಯಲಾದ ಕೀರ್ತಿ ಮಂದಿರಕ್ಕೂ ಇದು ಮತ್ತೊಂದು ಸಹೋದರಿ ದೇವಾಲಯವಾಗಿದೆ. == ಇತಿಹಾಸ ವಾಸ್ತುಶಿಲ್ಪ ಮತ್ತು ವಿನ್ಯಾಸ == ೧೪ಜನವರಿ ೨೦೦೧ ರಂದು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಜಗದ್ಗುರು ಶ್ರೀ ಕೃಪಾಲು ಜಿ ಮಹಾರಾಜ್ ಅವರು ಈ ಮಂದಿರದ ಶಂಕುಸ್ಥಾಪನೆ ಮಾಡಿದರು. ಸುಮಾರು ೧೦೦೦ ಕುಶಲಕರ್ಮಿಗಳನ್ನು ಒಳಗೊಂಡು, ಈ ದೇಗುಲದ ರಚನೆಯನ್ನು ನಿರ್ಮಿಸಲು ಸುಮಾರು ೧೨ ವರ್ಷಗಳನ್ನು ತೆಗೆದುಕೊಂಡಿತು. ವೃಂದಾವನದ ಸ್ಥಳವನ್ನು ಕೃಪಾಲು ಜಿ ಮಹಾರಾಜ್ ಅಭಿವೃದ್ಧಿಪಡಿಸಿದರು ಮತ್ತು ಅವರ ಮುಖ್ಯ ಆಶ್ರಮವು ವೃಂದಾವನದಲ್ಲಿದೆ. ಅವರು ಶ್ರೀ ವೃಂದಾವನಧಾಮಕ್ಕೆ ಪ್ರೀತಿಯ ಉಡುಗೊರೆಯನ್ನು ಅರ್ಪಿಸಿದ್ದಾರೆ. ಪ್ರೇಮ ಮಂದಿರವನ್ನು ಸಂಪೂರ್ಣವಾಗಿ ಇಟಾಲಿಯನ್ ಅಮೃತಶಿಲೆಯಿಂದ ನಿರ್ಮಿಸಲಾಗಿದೆ. ಇಲ್ಲಿ ಧ್ವಜ ಸೇರಿದಂತೆ ದೇವಾಲಯದ ಒಟ್ಟು ಆಯಾಮಗಳು ೧೨೫ ಅಡಿ ಎತ್ತರ ಹಾಗೂ ೧೯೦ ಅಡಿ ಉದ್ದ ಮತ್ತು ೧೨೮ ಅಡಿ ಅಗಲ ಹಾಗೂ ಎತ್ತರದ ವೇದಿಕೆಯು ಎರಡು ಅಂತಸ್ತಿನ ಬಿಳಿ ಸ್ಮಾರಕದ ಸ್ಥಾನವಾಗಿ ಕಾರ್ಯನಿರ್ವಹಿಸುತ್ತದೆ. ದೇವಾಲಯದ ವೇದಿಕೆಯಾದ ಮಂದಿರದ ಪ್ರಾಂಗಣದಲ್ಲಿ ಪ್ರದಕ್ಷಿಣೆ ಮಾರ್ಗವನ್ನು ನಿರ್ಮಿಸಲಾಗಿದೆ ಹಾಗೂ ಇದು ದೇವಾಲಯದ ಹೊರಗೋಡೆಗಳ ಮೇಲೆ ಕೆತ್ತಲಾಗಿರುವ ಶ್ರೀ ರಾಧಾ ಕೃಷ್ಣನ ಕಾಲಕ್ಷೇಪವನ್ನು ಚಿತ್ರಿಸುವ ೪೮ ಫಲಕಗಳನ್ನು ವೀಕ್ಷಿಸಲು ಪ್ರವಾಸಿಗರಿಗೆ ಅನುವು ಮಾಡಿಕೊಡುತ್ತದೆ. ಇಲ್ಲಿನ ಗೋಡೆಗಳನ್ನು ೩.೨೫ ಅಡಿ ದಪ್ಪವಿರುವ ಘನ ಇಟಾಲಿಯನ್ ಅಮೃತಶಿಲೆಯಿಂದ ಮಾಡಲಾಗಿದೆ. ಮಂದಿರದ ಬೃಹತ್ ಶಿಖರ, ಸ್ವರ್ಣ ಕಲಶ ಮತ್ತು ಧ್ವಜದ ಭಾರ ಹೊರಲು ಗರ್ಭಗೃಹದ ಗೋಡೆಗಳನ್ನು ೮ ಅಡಿಯಷ್ಟು ದಪ್ಪವಾಗಿ ನಿರ್ಮಿಸಲಾಗಿದೆ. ದೇವಾಲಯದ ಹೊರಾಂಗಣದಲ್ಲಿ ೮೪ ಫಲಕಗಳನ್ನು ಸ್ಥಾಪಿಸಲಾಗಿದೆ ಮತ್ತು ಶ್ರೀ ರಾಧಾ ಕೃಷ್ಣನ ಪ್ರೀತಿಯ ಕಾಲಕ್ಷೇಪವನ್ನು ಇಲ್ಲಿ ಪ್ರದರ್ಶಿಸಲಾಗುತ್ತದೆ. ಇದನ್ನು ಹೊರತುಪಡಿಸಿ, ರಾಧಾ ಕೃಷ್ಣ ಲೀಲೆಯ ಹಲವಾರು ಭಾವಚಿತ್ರಗಳು ಅಥವಾ ಭಗವಾನ್ ಕೃಷ್ಣನ ಪವಾಡಗಳನ್ನು ಸಹ ದೇವಾಲಯದ ಒಳಗೆ ಕಾಣಬಹುದು. == ಕಾರ್ಯಕ್ರಮಗಳು == ಜಗದ್ಗುರುತ್ತಮ್ ದಿವಸ್ ಮಹೋತ್ಸವ ಜನ್ಮಾಷ್ಟಮಿ ರಾಧಾಷ್ಟಮಿ == ದೇವಾಲಯದ ಛಾಯಾಂಕಣ == == ಸಹ ನೋಡಿ == ಬಂಕೆ ಬಿಹಾರಿ ದೇವಸ್ಥಾನ ರಾಧಾ ರಾಣಿ ದೇವಸ್ಥಾನ == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಪ್ರೇಮ ಮಂದಿರ ಪ್ರೇಮ್ ಮಂದಿರ ವೃಂದಾವನ ಸಂಪೂರ್ಣ ಮಾಹಿತಿ ಪ್ರೇಮ್ ಮಂದಿರ ವೃಂದಾವನ - .